Tuesday, April 14, 2009

ಮರೆಅಯಲೆಂತು ನಿನ್ನ !!!?


ಮರೆಯಲೆಂತು ಆದದ್ದೆಲ್ಲವ ?

ಚಿರಕಾಲವೀ ನೆನಹುಗಳು .ಪಾರ್ಥನ

ಇಟ್ಟ ಗುರಿ ,ಬಿಟ್ಟ ಬಾಣದಂತೆ

ನೇರ ಹೃದಯವ ಛೇದಿಸುವುದು .

ಕಳೆದ ನಿನ್ನೆಗಳ ಕಹಿ ನೆನಹುಗಳಿಗೇಕೆ

ನನ್ನಿಂತು ಕಾಡಿ ಪೀಡಿಸುವ ಚಪಲ?

ಇಲ್ಲ ಸಲ್ಲದ ನೆಪಹೊತ್ತು ಕರೆಯದ

ಅತಿಥಿಯಂತೆ ಬಂದೇಕೆ ಸುಳಿದುಹೋಗುವುದು?

ಬೆಂಬಿಡದೆ ಕಾಡಿ ಹುಚ್ಚೆದ್ದು ಕುಣಿವ ಈ ಪರಿಗೆ

ಬೇಸೆತ್ತು,ಮುನಿದು ಕೋಪ ಕಾರಿದರೆ

ಅಡಗಿ ಮತ್ತೇಕೆ ನುಸುಳಿ ಕಾಯ ಬಿಚ್ಚಿ

ಎದೆ ಮೇಲೆ ಕಾಲಿಟ್ಟು ಗಹ ಗಹಿಸಿ ನಗುವುದು ?

ಬಿಟ್ಟು ಹೋದ ಸಂಬಂಧಗಳ ಮೂಹಪಾಶದಿ ಬಳಸಿ ,

ತಲ್ಲಣಗಳ ವ್ರುಧ್ಧಿಸಿ ,ಶಾಂತತೆಯ ಕದಡಿ ,

ಅಳುವ ಅರಳಿಸಿ ,ನಗುವ ಮುದುಡಿಸಿ

ಸಂಭ್ರಮಿಸುತ ದಾಹವನ್ನೇಕೆ ತಣಿಸಿಕೊಳ್ಳುವುದು?

ಬೇಡ !!! ಪೀಡಿಸದಿರು ನೆನಪೇ ........................

ಎನ್ನ ಕಾಡುವ ನಿನ್ನ ಸಾಂಗತ್ಯಕ್ಕೆ ಕುಣಿಕೆ ಏರಿಸಿ

ಅಂತ್ಯ ಮಾಡಿ ಅಂದೇ ಶ್ರದ್ಧಾಂಜಲಿಯ ಅರ್ಪಿಸಿದೆ

ಆದರೂ ........ಆದರೂ................

ಮತ್ತೆ ಬಂದಿರುವೆಯಲ್ಲ

Sunday, April 12, 2009

ಕವಿ ಹೃದಯ



ಮತ್ಸರ ಬೇಡ ಗೆಳೆಯ
ಕವಿ ಹೃದಯವ ನೀ ಚಿವುಟಲಾರೆ
ಭಾವ ಪನ್ನೀರ ಬಿಂದುಗಳ
ಸಿಂಚಿಸಿ ಧಮನಿ ಧಮನಿಗಳಲ್ಲೂ
ಸ್ಫೂರ್ತಿಯ ಸೃಜಿಸುವ ಎನ್ನ
ಕಾವ್ಯ ಶಕ್ತಿಯ ನೀ ತಡೆಯಲಾರೆ
ಮನದೊಳು ಗುಪ್ತಗಾಮಿನಿಯಾಗಿ
ಹರಿವ ಸ್ನೇಹ ಸೌದಾಮಿನಿಯಡಿ
ಹೊರಬಂದ ಅನುರಾಗವ ನಿಲ್ಲಿಸಲಾರೆ
ಭಾವಾನುರಾಗದ ಮಧುರಾಲಾಪವ
ನೀ ಅಪಸ್ವರದಿ ಮುಳುಗಿಸಲಾರೆ
ಕವಿ ಹೃದಯದ ಭಾವ ಸಂಚಲನೆಗಳ
ಸಂವೇದನೆಯ ವಿಜಯ ದುಂಧುಬಿಯ
ಮೊಳಗಿಸುವ ಕಾವ್ಯ ಮದ್ದಳೆಯ
ಪಕ್ಕಕ್ಕೆ ದೂಡಲಾರೆ,ಪದಗಳ ಮುದ್ದಿಸಿ ,
ಕುಣಿಸಿ ,ಲಾಲಿಸಿ ,ನಲಿಸಿ ಹುಟ್ಟಿಸಿದ
ಕವನದ ಹೊಳೆಯೊಳು ಎನ್ನ ಕೆಣಕಿದ
ನೀ ಕೊಚ್ಚಿ ಹೋಗುವೆ ಗೆಳೆಯ

Wednesday, April 8, 2009

ಆಕಳಿಕೆ



ಇರುಳಲಿ ಶಶಿ ಬಂದನೆಂದರೆ ಇದೇ ಗೋಳು

ಎದೆಯಾಳದ ನೆನಪುಗಳ ಮೂಕರಾಗಕೆ ನಾನಾಗುವೆ ಜೀತದಾಳು

ದಿನದ ಪ್ರೀತಿ ಮೊಳೆತು ಭಾವ ಬೆಳೆದು ಈ ನಿಶೆ ಬಂದಾಗ

ಮನ ಮಂದಿರ ಪಾಳು ಬರೇ ಹಾಳು ಸಾಕು

ಛೇ !ಈ ಕಾಲ ಪುರುಷ ಮಗ್ಗುಲು ಬದಲಿಸಿದರೆ ಸಾಕು ಕೊನೆಯಾಗುವುದು

ಆ ಕ್ಷಣ ಈ ಭಾವ ಬಿಕ್ಕಳಿಕೆ ,ವಿರಹದ ನರಳಿಕೆ

ಚಂದ್ರನಿಗೂ ಬರುವುದು ಆ ಹೊತ್ತಿಗೆ ಒಂದಾದ ಮೇಲೆ ಒಂದಂತೆ

ಆಕಳಿಕೆ .

ಹುಡುಕಾಟ



ಎಷ್ಟು ಹುಡುಕುವುದೋ ನಾ ಬೇರೆ ಕಾಣೆ

ಆ ಮಗ್ಗುಲು ಈ ಮಗ್ಗುಲು ಎಲ್ಲೂ ಕಾಣುತ್ತಿಲ್ಲ

ಅಲ್ಲೇ ಕೂಡಿ ಹಾಕಿದ್ದೆ ಕೈ ತಪ್ಪಿ ಪರರ ಪಾಲಾಗಿದೆಯಮ್ಬ

ಆತಂಕದಲ್ಲಿ ,ಇಲ್ಲ !ಅಲ್ಲೇ ಇದ್ದ ನೆನಪು !

ನೆನಪು ವಂಚಿಸುವುದಿಲ್ಲ .ಅಂದು ಕಂಡದ್ದು ಕಂಡು ಇಚ್ಚಿಸಿದ್ದು

ಇಚ್ಚಿಸಿ ಕರೆ ತಂದಿದ್ದು ಆ ಸುಕೋಮಲ ಸ್ಪರ್ಶಕ್ಕೆ ಮನಸೋತು ಎದೆಗಪ್ಪಿ

ಚುಂಬಿಸಿ ಇದೇ ಪುಸ್ತಕದ ಪುಟವೊಂದರಲ್ಲಿ ಅಡಗಿಸಿಇಟ್ಟಿದ್ದೆ

ಎಲ್ಲಿ ಮರೆಯಾಯಿತೋ ಆ ನವಿಲು ಗರಿ ?

ಪ್ರಯತ್ನ ಬೇಕಷ್ಟೇ



ಬಹುಕಾಲ ಒಂದೇ ಕಡೆ ಪ್ರದಕ್ಷಿಣೆ ಹಾಕಿ ಶಕ್ತಿ ಕುಂದಿ ಸುಸ್ತಾಗಿ

ನಿಂತಿದೆ .ವಿಧ ವಿಧ ಭಂಗಿಗಳ ವ್ಯಾಯಾಮಕ್ಕೆ ಅತ್ತ ಇತ್ತ ತಿರುಗಿ ತಿರುಗಿ

ಕೈಗಳು ಸೋತು ನೆಲ ಕಚ್ಚಿವೆ .ದಡ ಬಡ ನಡೆದಾಡಿ ಪ್ರತಿ ಕ್ಷಣವೂ ಮಾತಾಡಿ

ಬಾಯಾರಿ ಈಗ ಮೌನ ರೆಕ್ಕೆ ಬಿಚ್ಚಿ ಮನೆಯೆಲ್ಲ ಬಿಕೋ ಎನಿಸುತಿದೆ

ಚಿಂತೆಯೇಕೆ ಮಾಡುವಿರಿ ಒಮ್ಮೆ ಕೀಲಿ ಕೊಟ್ಟು ನೋಡಿ ಮತ್ತೆ ಪ್ರಾರಂಭಿಸುವುದು

ತನ್ನ ವ್ಯವಹಾರವ ನಿಂತಿರುವ ಈ ಗಡಿಯಾರ !

Tuesday, April 7, 2009

Monday, April 6, 2009

ಕನಸು

ಹಗಲೊಳು ನೂರಾರು ಆಸೆ ಹೂಗುಚ್ಚಗಳ
ಮನದಿ ಸೇರಿಸಿ,ಇರುಳೊಳು ನಿದ್ರಾದೇವಿಯ
ಬೆಚ್ಚನೆಯ ಮಡಿಲೋಳು ತಲೆಯಿಟ್ಟು
ದ್ವಂದ್ವ ,ತಾಕಲಾಟಗಳ ಬದಿಗೊತ್ತಿ ,
ಮೈಮರೆತು ನಿದ್ರಿಸಿ ,ನಿಗೂಢ
ಲೋಕದಿ ಪಯಣಿಸಿದ ಕನಸು
ನೀಲಿಗಗನದ ತುಂಬಾ ಗರಿಗೆದರಿ
ಮೇಘಗಳ ಚುಮ್ಬಿಸಿದಂತೆ ತಾರೆಗಳ ಕಂಡು
ಉಳಿದಂತೆ ,ಚಂದ್ರಲೋಕದ ಕ್ಷೀರ ಸಾಗರದಿ
ಮಿಂದು ಬಂದಂತೆ ,ಸುಮನೋಹರ ಶ್ವೇತ ಮುತ್ತುಗಳ ಹೊತ್ತು ತಂದು
ಮಧುರಾನಂದವ ಪಡೆದಂತೆ ಕನಸು
ಅದೃಶ್ಯ ಮನದೊಳು ಅಡಗಿ ಕುಳುತಿಹ
ಭಾವವ ಕೆಣಕಿ ,ಚಿಂತೆಗಳ ಮಥಿಸಿ
ಎಚ್ಚರ -ನಿದ್ರೆಗಳ ತ್ರಿಶಂಕು ಸ್ಥಿತಿಯ
ಕಡಲ ತೆರೆಗಳಿಂದ ಉಮ್ಮಳಿಸಿ ಬಂದ
ಸುಪ್ತ ಸಂದೇಶಗಳ ಹೊತ್ತು ತಂದಂತೆ ಕನಸು
ಜಗದ ವಿಕೋಪ ,ವೈಪರಿತ್ಯ ,ಅನಿವಾರ್ಯ ,
ಅನಿಶ್ಚತೆಗಳ ಮರೆತು ,ವಸುಂಧರೆಯ ಗರ್ಭವ
ಹೊಕ್ಕಿ ಹೊನ್ನು ,ವೈಧುರ್ಯಗಳ ಹುಡುಕಿ ,
ಹಿಡಿದು , ಆರಿಸಿ ,ಜಾಲಾಡಿಸಿ
ಅಮೂಲ್ಯ ಭವಿತವ್ಯದ ಕ್ಷಣಗಳ
ನೆನೆದು ಸಂಭ್ರಮಿಸಿದ ಕನಸು

ಕಾಣದೂರಿಗೆ ಪಯಣ !

ಕಾಣದೂರಿಗೆ ಬಂಡಿ ಹೊರಟಿದೆ
ದಾರಿ ಎಷ್ಟು ದೂರವಿದೆಯೋ ?ಎನ್ತಿದೆಯೋ
ಸಾಗುತಿದೆ ಬಂಡಿ ಆಸೆ ,ಕನಸು,ಪ್ರೀತಿ
ಸ್ವಾರ್ಥ ,ರಾಗಾನುರಾಗಗಳ ಹೊತ್ತು ಸಂಭ್ರಮದಲ್ಲಿ
ಕಳೆದ ನಿನ್ನೆಗಳು ,ಮೊಳೆವ ನಾಳೆಗಳು
ಮೂದುತಿರುವ ಇಂದಿಗಾಗಿ ಸಾಗಿದೆ ,ಸಾಗುತಲಿದೆ
ಸಾಗಲಿದೆ ಆ ಬಂಡಿ ಮೂರಕ್ಕಿಳಿಯದೆ
ಆರಕ್ಕೆಲದೆ ನೂರಾರು ಜಂಜಾಟಗಳಲ್ಲಿ ಸಿಲುಕಿ
ಸಾಕಪ್ಪಾ ಸಾಕೀ ಪಯನವೆಂದ ಬಂದಿಹೊತ್ತ ಒಂಟಿ
ಎತ್ತಿನ ಮೇಲೆ ಸಾಹೇಬನ ಚುರುಗುಡುವ ಚಡಿಯೇಟು
ಬೆನ್ನಿಗಂಟಿದ ಅವನ ಜೋಳಿಗೆಯಲ್ಲಿ ಪಾಪ ಪುಣ್ಯಗಳ
ಲೆಕ್ಕಾಚಾರಗಳೆಷ್ಟಿವೆಯೋ ಯಾರಿಗೆ ಗೊತ್ತು ?
ಒಮ್ಮೆ ಸರಾಗದ ಪಯಣ ,ಮಗದೊಮ್ಮೆ ತೆವಳಾಟ ,
ವೇಳೆಗೆ ಮೊದಲಾಗಲಿ ,ತಡವಾಗಲಿ
ಊರಸೆರುವಂತಿಲ್ಲ .ಎಲ್ಲವೂ ಮೊದಲೇ
ನಿರ್ಧರಿತ ,ಸಾಹೇಬನ ಅಣತಿಯ ಮೀರುವಂತಿಲ್ಲ
ಕೊನೆವರಗೂ ಸಾಗಲೇ ಬೇಕೀ ಪಯಣ
ಜಗ್ಗದೆ ,ಕುಗ್ಗದೆ ,ಹಿಗ್ಗದೆ ರಹದಾರಿ ತುಂಬ
ಭೂತಕಾಲದ ನೂರಾರು ಬಂಡಿ ಚಕ್ರಗಳ
ಗುರುತು ,ಉಳಿಯುವುದೇ ಈ ಬಂಡಿಯ ಗುರುತು ?

Tuesday, March 31, 2009

ಅಂದೊಂದು ದಿನ



ಅಂದೊಂದು ದಿನ ಪರಿಚಿತ ಲೋಕದ ಕೊಂಡಿಯೊಂದು

ಆಕಸ್ಮಿಕದಿ ಸೇರಿತ್ತು ,ಈ ತೀರದಲ್ಲಿನ ನಿನ್ನ ಮುಖ ನನಗೆ

ನನ್ನ ಮುಖ ನಿನಗೆ ಮಸುಕು ಮಸುಕಾಗಿ ಕಂಡು

ಆಶ್ಚರ್ಯದ ಮುಗ್ಧನಗೆ ಹೊರಬಿದ್ದಿತ್ತು .

ಕಣ್ಣಂಚಿನಲ್ಲಿ ಸುಳಿ ಮಿಂಚೊಂದು ಫಳ ಫಳಿಸಿ ಭರವಸೆಯೊಂದು

ಚಿಗುರೊಡೆದಿತ್ತು ,ಮೌನರಾಗದ ಆಹ್ಲಾದತೆ ಎದೆ ತುಂಬಿತ್ತು

ಕನಸಿನ ಲೋಕದ ಕಡೆಗೆ ಹೆಜ್ಜೆ ಸಾಗಿತ್ತು ತಂಗಾಳಿಯ

ಮೋಹದಲೆಯ ಸ್ವರವು ಲಯಬದ್ಧವಾಗಿ ಹೊರಹೊಮ್ಮಿತ್ತು

ತೀರಗಲಾಚೆಯೊಂದು ಪಿಸುಮಾತಿತ್ತು ,ಸಂಭ್ರಮದ

ಇದಿರು ನೋಟವಿತ್ತು ,ಮಲ್ಲಿಗೆಯ ಪರಿಮಳ ದೂರದೂರಿನಿಂದ

ತೇಲಿ ಬಂದಿತ್ತು ,ಹೃದಯದಲ್ಲಿ ಕಿತ್ತ ಭಾವಪೂರ್ಣ

ಪದಗಳ ನಾಲಿಗೆಯ ಮೇಲೆ ಆಡಿಸುವಾಸೆಯಾಗುತ್ತಿತ್ತು .

ಆ ತೀರಕೆ ನಾನೇ ಬಂದು ಸೇರಲು ಹೆಜ್ಜೆ ಸನ್ನದ್ಧವಾಗಿತ್ತು

ಮನವು ದೋಣಿಗಾಗಿ ಹಾತೊರೆಯುತ್ತಿತ್ತು ,ಮರುಘಳಿಗೆಯೇ

ನೀ ದಾರಿ ಬದಲಿಸಿದೆ ನೀ ಏಕೆ ಹೊರತೆಯಂದೂ ತಿಳಿಯಲಿಲ್ಲ

ಅದ ಕೇಳುವ ತಾಕತ್ತು ನನಗಿರಲಿಲ್ಲ

ಕೂಗಲು ಬಾಯೇ ಬರಲಿಲ್ಲ ,ಸ್ವಾಭಿಮಾನ

ನಾಲಿಗೆಯ ಕಟ್ಟಿ ಹಾಕಿತ್ತು ,ಹಿಂತಿರುಗಿ ನೋಡಿ ನಸು ನಗೆ

ಬೀರುವ ಸೌಜನ್ಯವೂ ನಿನಗಿರಲಿಲ್ಲ ಒಮ್ಮೆಗೇ ಏಕಾಂತ ಕವಿಯಿತು

ಕುರುಡು ಕನಸಿನ ಲೋಕದಿ ಹೆಜ್ಜೆ ಗುರುತಾಗಿ ಉಳಿಯಿತು .

ನನ್ನದೇ ತಪ್ಪಿರಬೇಕು ಸುಮ್ಮನೆ ನಿನ್ನ ನಿರ್ಭಾವುಕ

ಕಂಗಳಲಿ ನನ್ನ ಮೊಗವ ಹುಡುಕಲು ಪ್ರಯತ್ನಿಸಿದ್ದೆ

ಹಿಂದೆಲ್ಲ ನನ್ನ ಕಂಗಳಲ್ಲಿ ಅವರ ಮೊಗ ಕಾಣಲು

ಯತ್ನಿಸಿದ್ದಾಗ ನಾನು ನಿರ್ಭಾವುಕದಿ ನಿಂತಿದ್ದೆ .

Monday, March 30, 2009


ಪ್ರೀತಿಯೇ ನೀ ಗುಪ್ತಗಾಮಿನಿ

ಹೃದಯಗಳ ನಡುವೆ ಹರಿಯುವ ಮೋದಿನಿ

ಮೃದು ನಳಿನಿ ಅಂತರಂಗದ ಸುಹಾಸಿನಿ

ಕರುಣೆಯೇ ನೀ ಪ್ರೀತಿ ಸ್ನೇಹಗಳ ಹುಟ್ಟಿನ ಕಾಮಿನಿ

ದಯೆ ಮರುಕಗಳ ಮಾಲಿನಿ ,ಶಾಲಿನಿ ,ಮೋಹಿನಿ

ಶಾಂತಿ ಮನಮೋಹಿನಿ

ಸ್ನೇಹವೇ ನೀ ಜೀವ ಸಂವೇದನೆಯ

ಅಮೃತವಾಹಿನಿ ತ್ಯಾಗ ಪ್ರೀತಿಯ ಪರಿಪಾಲಿನಿ

ಅನುರಾಗ ಆನಂದ ಸಂವರ್ಧಿನಿ

ಶಾಂತಿಯೇ ನೀ ಸ್ವಾರ್ಥ ಅಹಂಕಾರಗಳ ಸಂಹಾರಿಣಿ

ಸಜ್ಜನಿ ಹೃದಯ ಪೋಷಿನಿ ವಿಲಾಸಿನಿ

ನೀ ವಿಶ್ವ ಕುಟುಮ್ಬಿನಿ.

ಅಂತರಂಗದ ಗಾನ



ಅಂತರಂಗದ ಒಳಗೆ

ನಿನ್ನ ಮೋಹನ ಗಾನ

ಪ್ರೀತಿ ಸಿಂಚನ ರೋಮಾಂಚನ

ಭಾವ ನವ ನವೀನ

ಎನ್ನ ಹ್ರುದಯಾಲಯದಿ ಸ್ಫೂರ್ತಿ

ಮಂಟಪ ಪ್ರೀತಿ ದೀಪ ಅನುರಾಗ

ಅರಿಶಿನ ಕುಂಕುಮ

ಅದುವೇ ನಮ್ಮ ಪ್ರೇಮ ಸಂಗಮ

ಪ್ರೀತಿ ನುಡಿಗಳೇ ಮಂತ್ರಾರ್ಚನೆ

ಅದುವೇ ಪ್ರಣಯ ಸಾಧನೆ

ಪಿಸು ಮಾತೆ ಮಂಗಳ ವಾದ್ಯ

ಸ್ನೇಹ ಅನುಭವ ವೇದ್ಯ

ಹೃದಯ ಮಂದಿರದಿ ಕಲೆ ಹಾಕುವ

ಹೂಗಳ ಪೋಣಿಸುವ

ಜೋಡಿಸುವ ಪುಷ್ಪ ಮಾಲೆ

ಅದೇ ನಮ್ಮ ನಡುವಿನ ಸಂಬಂಧ ಮಾಲೆ

Saturday, March 28, 2009

ಕನಸಿನಲ್ಲಿ ಭೇಟಿ !


ನಾಲಿಗೇಕೀ ಅಂಜಿಕೆ ಆತ ಕಣ್ಣೆದುರು ಬಂದು
ನಿಂತಾಗ ರೆಕ್ಕೆ ಸೋತ ಹಕ್ಕಿಯಂತೆ
ಬೆಪ್ಪಾಗಿ ಬೀಳುವುದು ಆತ ಕಣ್ಣೆದುರು ನಿಂತು
ನಸುನಗೆ ಬೀರಿದಾಗ

ನೇರವಾಗಿ ನಿಂತು ಮಾತನಾಡಲಾಗುವುದಿಲ್ಲ
ಅಪ್ಪಳಿಸುವ ಭಾವಗಳು ಕಣ್ಣ ಕತ್ತಲಾಗಿಸುವುದಲ್ಲ !
ಏಕೆಂದರೆ ಎಚ್ಚರದಲಿ ಮಣ್ಣ ಭಾರದ ಸುಪ್ತ
ಆಸೆಗಳ ತೆರೆದಿದುವಷ್ಟು ಎದೆಗಾರಿಕೆಯಿಲ್ಲ !

ಕನಸುಗಳೆಷ್ಟು ಮಧುರ !ನೂರಾರು ಸಿಹಿ ಆದೆಗಳ ಮೊಳೆಸಿ
ಬೆಳೆಸಿ ,ಹೊತ್ತು ನಿಂತ ತುಂಬು ಗರ್ಭಿಣಿ ಯಂತೆ
ಪ್ರಸವ ವೆದನೆಯಲೂ ಏನೋ ಖುಷಿ ,ಹೊಂನಕಿರಣದ
ಪ್ರಕಾಶ ಅಲ್ಲಿ ಅವನೊಡನೆ ಮಾತನಾಡಲು ಭಯವೇ ಆಗುವುದಿಲ್ಲ !

ಕನಸು ವಾಸ್ತವ ಗಳೆರಡಕ್ಕೂ ಒಂದೇ ಬಿಗಿಯಾದ
ನಂಟು ಹಗಲಿನಲಿ ಟೈಪಿಸಿ ಇರುಳಿನ ಹೊತ್ತಲಿ ತೆಗೆದ
ಪ್ರಿಂಟ್ ಔಟ್ ಗಳ ಕಾಪಿಯಂತೆ ಕಾಡಿ ಪೀಡಿಸುವಾಗಲೂ
ಅದರ ಮೇಲೆ ಕೋಪ ತಾಪಗಳೇ ಇಲ್ಲ ಎಂತದೋ ಸಂತಸ .

ನಕ್ಕು ಬಿಡು ಮನವೇ


ನಕ್ಕು ಬಿಡು ಮನವೇ
ಹೃದಯ ವೇದನೆಯ ತಣಿಸಿ
ಕಲ್ಪನಾ ವಿಲಾಸದ ರಂಗವಲ್ಲಿಯ ಚಿತ್ರಿಸಿ,
ಆತ್ಮಬಲದ ಸಖ್ಯವ ಬೆಳೆಸಿ
ನಕ್ಕು ಬಿಡು ಮನವೇ

ಮೌನವಾಗದಿರು ,ಎನ್ನ ಕಾಡಿಸದಿರು
ಕೊಂಕಿಸದಿರು,ಅಪಹಾಸ್ಯ ಮಾಡದಿರು
ಕ್ಷೀರ ಸಾಗರದಿ ಶಶಿ ಉದಿಸಿ ಬಂದಂತೆ
ತುಂಬು ಬೆಳದಿಂಗಳಿನ ಅಮೃತ
ಸಿಂಚನ ಮಾಡಿ ನಕ್ಕುಬಿಡು

ಭಯದ ಸಂಕೋಲೆಗಳಿಂದ ಮುಕ್ತನಾಗಿಸಿ
ಆಂತರ್ಯದಲಿ ಹೂವಾಗಿ ಪ್ರಪ್ಹುಲ್ಲಿಸಿ
ಆನಂದ ಸೌರಭವ ಪಸರಿಸಿ
ದುಂಬಿಯ ಜ್ಜೇಂಕಾರದ ನಾದಕೆ ಸ್ಪಂದಿಸಿ
ನಕ್ಕುಬಿಡು ಮನವೇ

ಬಿಂಕ ಬಿನ್ನಣಗಳ ತೋರಿಸದಿರು
ಎನ್ನ ಕಡೆಗಣಿಸದಿರು
ಭಯ ಶೋಕಗಳ ಅಳಿಸಿ ,ಮನಸ್ಥೈರ್ಯವ
ಉಜ್ವಲಿಸಿ ,ಸಚ್ಚಿದಾನಂದ ರೂಪದಲಿ
ಪ್ರಕಾಶಿಸಿ ನಕ್ಕು ಬಿಡು ಮನವೇ

ಕವಿ ಚೇತನ


ಸಾಮಾನ್ಯದವನಲ್ಲ ಈ ಕವಿ

ಉದಾತ್ತ ,ಉನ್ಮತ್ತ ರಸಿಕ ಭಾವ ರಂಜನಿಯ

ಘೋಷ್ಟಿಯ ಗರ್ಭದೊಳು ರಾಗಾನುರಾಗವ

ಪಲ್ಲವಿಸಿ ಪ್ರಸವಿಸುವ ಚೇತನ


ದೇವಿ ವಾಣಿಯ ಬಳಿ ಸಾಹಿತ್ಯ ಪಾಠವ ಕಲಿತು

ಭಾಷ್ಯ ಪ್ರೀತಿಸಿ,ಭಾವವ ಆಲಂಗಿಸಿ

ಮಾಧುರ್ಯವ ಪ್ರವೇಶಿಸಿ ,ಪದಗಳೊಂದಿಗೆ

ಸರಸ ಸಲ್ಲಾಪ ಮಾಡುವ ಈ ಕವಿ ಸಾಮಾನ್ಯದವನಲ್ಲ


ಅರ್ಹತಾ ಸೌರಭವ ಆಘ್ರಾಣಿಸಿ ,ಸ್ವಾರಸ್ಯಬಲವ

ಅಧಿಕರಿಸಿ ,ವರ್ಣನಾ ಸಾಮರ್ಥ್ಯವ ಅಭಿವ್ಯಕ್ತಿಸಿ ,ಸುಧಾಂಶುವಿನ

ಸ್ಪೂರ್ತಿಯಲಿ ಪ್ರಪ್ಹುಲ್ಲಿಸಿ ,ಜ್ಞಾನಾಭಿಸಾರಿಕೆಯಪ್ರಾಣನಾಥನಾಗುವ

ಈ ಕವಿ ಸಾಮಾನ್ಯದವನಲ್ಲ


ಚಲುವಾದ ಕವನವ ಹುಟ್ಟಿಸಿ ,ಸಂಸ್ಕಾರದ ಪೀಯುಷವ

ರುಚಿಸಿ ,ಅಸಾಮಾನ್ಯ ವಿದ್ವದ್ಜನರ ಮುಂದಿಟ್ಟು

ಯೋಗ್ಯತಾ ಪರೀಕ್ಷೆಯ ಪೈಪೋಟಿ ಗಿಳಿದು

ಮುಕ್ತ ಕಂಠದ ಸ್ತುತಿಗೊಳಪಡುವ ಈ ಕವಿ ಸಾಮಾನ್ಯದವನಲ್ಲ .

ಮಮತೆಯ ಮಡಿಲು


ನೂರಾರು ಕನಸುಗಳ ಒಂದುಗೂಡಿಸಿದ

ಬಟ್ಟಲೊಳು ಪ್ರೀತಿಯ ಕಲೆಸಿ

ಉತ್ಸಾಹದಿ ಕಂದನ ಬಾಯ್ಗಿತ್ತು

ತನ್ನ ಹಸಿವ ಮರೆವ ಜನ್ಮದಾತೆಯಿವಳು



ಹೊಕ್ಕಳ ಬಳ್ಳಿಯಲಿ ಅಡಗಿದ್ದ ಜೀವಕ್ಕೆ

ರಕ್ತ ಮಾಂಸದ ಪಾಲು ನೀಡಿ ಸಡಗರದಿ

ಹೆತ್ತು ರಾಜೋಪಚಾರದಿ ಕಂದನ ಬಾಳ

ಬಂಗಾರವಾಗಿಸುವ ಪ್ರಾಣದಾತೆಯಿವಳು



ಪ್ರೀತಿ ವಾತ್ಸಲ್ಯಡಿ ಉಕ್ಕುವ ಅಮೃತವ ಎದೆಯಿಂದ

ಹರಿಸಿ, ಮಮತೆಯ ಮಡಿಲೋಳು ಪ್ರೀತಿಯ ಭೋರ್ಗರೆಸಿ

ತಾನು ಹಡೆದ ಹಸುಗೂಸೆ ತನ್ನ ವಿಶ್ವವೆಂದು

ಭಾವ ತಂಮ್ಯದ ನಿಸ್ವಾರ್ಥದಿ ಸಂಭ್ರಮಿಸುವ

ಜೀವ ಚೈತನ್ಯದ ಪೂರ್ಣ ಬಿಮ್ಬವಿವಳು



ಮೈತುಂಬಿ ಬೆಳೆದ ಮಗುವ ಕಣ್ ತುಂಬಿಸಿ ,ಮೊಂಡಾಟ,

ರಂಪ ಆಟಗಳ ಸೈರಿಸಿ, ಮನ್ನಿಸಿ ,ಕೆಲವೊಮ್ಮೆ ಶಿಸ್ತಿನಲಿ

ಮಗದೊಮ್ಮೆ ಪ್ರೀತಯಾಯಲಿ ದಂಡಿಸಿ ,ಉದಾರ ಹೃದಯದಿ

ಮಾಗಿಸಿ ,ಬಾಗಿಸಿ ,ಸವಿಯಾದ ಹಾಲ್ಗೆನ್ನೆಗೆ ಚುಂಬಿಸಿ ಅಪ್ಪುಗೆಯಲಿ

ಕಂದಮ್ಮನ ನೋವ ಮರೆಸಿ ವಾತ್ಸಲ್ಯದಿ ರಾಜಿಯಾಗಿ

ನವ ಜೀವನಪಥವ ತೋರುವ ಪ್ರೇಮಮಯಿ ಇವಳು


Friday, March 27, 2009

ಎಚ್ಚರ ಬತ್ತುತಲಿದೆ ಭೂತಾಯಿಯ ಒಡಲು!

ಒಂದೆಡೆ ವಾರಕ್ಕೊಮ್ಮೆ ಕೊಳಾಯಿಗಳಿಂದ ತೊಟ್ಟಿಕ್ಕುವ ಕುಡಿಯುವ ನೀರು ,ಮತ್ತೊಂದೆಡೆ ,ಹನಿ ಹನಿ ನೀರಿಗೂ ಪರದಾಡುತ್ತಾ,ಹಪಹಪಿಸುತ್ತಾ,ಖಾಲಿಕೊದಗಳ ಹಿಡಿದು ಬೀದಿ ಬೀದಿಗಳಲ್ಲಿ ಹೊಡೆದಾಡುವ ಹೆಣ್ಮಕ್ಕಳು ,ತಾನು ಹಾಕಿದ ಬೀಜ ಮೊಳೆಯದೆ,ಭೂ ತಾಯಿಯ ಬಾಯಿ ಒಣಗಿ ಬಿರುಕು ಬಿಟ್ಟ ನೆಲವನ್ನು ನೋಡುತ್ತಾ ಚಾತಕ ಪಕ್ಷಿಯಂತೆ ಮಳೆಗಾಗಿ ಕಾಯುತ್ತ ತಲೆಯ ಮೇಲೆ ಕೈ ಹೊತ್ತು ಕುಳಿತ ನೇಗಿಲಯೋಗಿ ,ಬರ ರಾಕ್ಷಸನ ಕೆಟ್ಟ ಹಸಿವಿಗೆ ಬರಿದಾಗಿರುವ ಊರ ಕೆರೆ,ತೊರೆ ,ಬಾವಿಗಳು . ಇಂತಹ ಹೃದಯ ವಿದ್ರಾವಕ ದೃಶ್ಯಗಳು ಬೇಡವೆಂದರೂ ಆಗಾಗ್ಗೆ ನಮ್ಮ ಕಣ್ಣ ಮುಂದೆ ಬಂದು ಆಗಾಗ ಸುಳಿದು ಹೋಗುತ್ತವೆ .ಇವು ಜಲಕ್ಷಾಮದ ಕೆಲವು ಮಾದರಿಗಳಷ್ಟೇ . ರೀತಿ ನೀರಿಗಾಗಿ ಎದ್ದಿರುವ ಆಕ್ರಂದನ ಮುಗಿಲು ಮುಟ್ಟಿದೆ .ನೀರಿಲ್ಲದ ಜಗತ್ತನ್ನು ನಾವು ಕನಸಿನಲ್ಲಿ ಊಹಿಸಿಕೊಳ್ಳುವುದೂ ಅಸಾಧ್ಯದ ಮಾತು .ಏಕೆಂದರೆ ,ನೀರು ಜೀವ ಸಂಕುಲದ ಮೂಲಾಧಾರ .ಆದರೆ ದುರಾಸೆ ಮನುಕುಲ ನಿಸರ್ಗ ಮಾತೆಯ ಮೇಲೆ ಮಾಡುತ್ತಿರುವ ವಿವೇಚನಾರಹಿತ ದುರಾಕ್ರಮನದ ಪ್ರತಿಫಲವೇ ಜಲಕ್ಷಾಮ.ಇದು ಕೇವಲ ಯಾವುದೋ ಒಂದು ರಾಷ್ಟ್ರದ ಕಥೆ -ವ್ಯಥೆಯಲ್ಲ ಇಡೀ ಪ್ರಪಂಚವೇ ಇದು ನೀರಿಗಾಗಿ ಪರಿತಪಿಸುತ್ತಿದೆ .ರಾಜ್ಯ,ರಾಷ್ಜ್ತ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದೆ .ಭಾರತದಲ್ಲೇ ೧೯೪೭ ರಲ್ಲಿ ೬೦೦೮ ಕ್ಯುಬಿಕ್ ಮೀಟರ್ ನಷ್ತಿದ್ದ ನೀರಿನ ಪ್ರಮಾಣ ಈಗ ೨೨೬೬ ಕ್ಯುಬಿಕ್ ಮೀಟರ್ ಮಟ್ಟಕ್ಕೆ ಕುಸಿದಿದೆ .ಇದು ೧೦೦೦ ಮಟ್ಟಕ್ಕೆ ಇಳಿದಿದ್ದೆ ಆದರೆ ದೇಶದ ಅರ್ಥವ್ಯವಸ್ಥೆಯೇ ಕುಸಿದು ಬೀಳುತ್ತದೆ ಎಂದು ಟಾಟ ಎನರ್ಜಿ ಇನ್ಸ್ಟಿಟ್ಯೂಟ್ ಭವಿಷ್ಯ ನುಡಿದಿದೆ .




ಇನ್ನಾದರು ನಾವು ಎಚ್ಚೆತ್ತು ಕೊಲ್ಲದಿದ್ದರೆ ಭವಿಷ್ಯದ ಜನಾಂಗ ನಮ್ಮನ್ನು ಎಂದೂ ಕ್ಷಮಿಸುವುದಿಲ್ಲ .ಮಳೆಯ ಒಂದು ಹನಿಯು ಸಾಗರ ಗರ್ಭವನ್ನು ಸೇರದಂತೆ ಎಚ್ಚರ ವಹಿಸಿ ನೀರನ್ನು ಅಭಿವೃದ್ಧಿ ಕಾರ್ಯಗಳಿಗೆ ಹೊತ್ತು ಭಗೀರಥರು ನಾವಾಗಬೇಕಿದೆ .






ನೀರಿನ ಸಂರಕ್ಷಣೆ ಹೇಗೆ ?




ನೀರು ಎಂಬ ಸಂಪತ್ತು ಮಿತವಾಗಿದೆ .ಆದರೆ ಅದು ಬಹು ಕಾರ್ಯಗಲಿ ಉಪಯೋಗಿಸಲ್ಪಡುತ್ತಿದೆ .ಇಂತಹ ಕೊರತೆಯ ಸಂಪನ್ಮೂಲವನ್ನು ಹೆಚ್ಚಿನ ಜಾಗರೂಕತೆಯಿಂದ ಅಗತ್ಯತತೆಗಲಿಗಾಗಿ ಉಪಯೋಗಿಸುವುದೇ ಜಲಸಂರಕ್ಷಣೆ .


}ದೇಶದ ಪ್ರತಿ ನಾಗರೀಕನು ಒಂದೊಂದು ಹನಿ ನೀರನ್ನು ಸುವರ್ಣ ಬಿಂದುಗಳೆಂದು ಪರಿಗಣಿಸಬೇಕು .


}ಮಳೆ ನೀರಿನ ಶೇಖರಣೆ ಮಾಡಿ ಶುದ್ಧೀ ಮಾಡುವ ಪ್ರಕ್ರಿಯೆ ವಿಧಾನಗಳು ಪ್ರತೀ ಮನೆಯನ್ನೂ ತಲುಪ ಬೇಕಾಗಿದೆ .ಇದರಿಂದ ಮಳೆ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುವುದನ್ನು ತಪ್ಪಿಸಬಹುದು .


}ಅಮೇರಿಕಾ ,ಥೈಲ್ಯಾಂಡ್ ,ಇಂಗ್ಲಂಡ್ ಇನ್ನಿತರ ರಾಷ್ಟ್ರಗಳಲ್ಲಿ ಸರ್ಕಾರದ ಅನುಮತಿಯಿಲ್ಲದೆ ಅಂತರ್ಜಲವನ್ನು ಬಳಸುವಂತಿಲ್ಲ .ಆದರೆ ಭಾರತದಲ್ಲಿ ಕೊಳವೆ ಬಾವಿಗಳನ್ನು ಅವ್ಯಾಹತವಾಗಿ ಬಳಸಲಾಗುತ್ತಿದೆ .ಇದರಿಂದ ಯು ಏನ್ ಡಿ ಪಿ ವರದಿಯ ಪ್ರಕಾರ ಪ್ರತಿವರ್ಷ %ಅಂತರ್ಜಲ ಕುಸಿಯುತ್ತಿದೆ .ಆದ್ದರಿಂದ ಸರ್ಕಾರ ಕೂಡಲೇ ಅಂತರ್ಜಲವನ್ನು ಸಂರಕ್ಷಿಸುವ ಪ್ರಭಾವಿ ಕಾಯ್ದೆಯನ್ನು ಜಾರಿಗೆ ತರಬೇಕು .ಅದನ್ನು ಬಿಟ್ಟು ಭೂ ತಾಯಿಯ ಗರ್ಭವನ್ನು ತೋಡಿ ತೋಡಿ ಕೊನೆಗೆ ಬತ್ತಿಸಿ ನೀರು ಬೇಕು ಮಳೆ ಬರಲಿಲ್ಲವೆಂದು ಕತ್ತೆ ಕಪ್ಪೆಗಳಿಗೆ ಮಾಡುವೆ ಮಾಡಿಸಿದರೆ ಸಮಸ್ಯೆ ನೀಗುತ್ತದೆಯೇ ?


}ಕೃಷಿ ಕ್ಷೇತ್ರದಲ್ಲಿ ನೀರು ಪೋಲಾಗುವುದನ್ನು ತಪ್ಪಿಸಲು ಹನಿ ನೀರಾವರಿ ಹಾಗು ತುಂತುರು ನೀರಾವರಿ ಪದ್ಧತಿಗಳನ್ನು ಇನ್ನೂ ಯಶಸ್ವಿಯಾಗಿ ಅಳವಡಿಸಬೇಕು .


}ಅರಣ್ಯ ನಾಶವನ್ನೂ ಕೂಡ ತಡೆಯಬೇಕು


}ಮನೆಯ ಆರ್ಥಿಕ ವ್ಯವಹಾರಗಳಿಗೆ ಹೇಗೆ ಹಣವನ್ನು ಮೀಸಲಿಡಲು ಬಜೆಟ್ಟನ್ನು ಮಾಡಿಕೊಳ್ಳುತ್ತೆವೆಯೋ ಹಾಗೆಯೇ ನೀರನ್ನು ಎಷ್ಟು ಬಳಸಿಕೊಳ್ಳ ಬೇಕು ?ಹೇಗೆ ಬಳಸಬೇಕು ?ಎಂಬ ವಾಟರ್ ಬಜೆಟ್ ಕಲ್ಪನೆಯೂ ಬೇಕು


}ಕೆಲವು ಕೃತಕ ಪಾನೀಯ ಕಂಪನಿಗಳು ಎಲ್ಲೆಂದರಲ್ಲಿ ನೆಲ ಅಗೆದು ನೀರನ್ನು ಉಪಯೋಗಿಸಿಕೊಳ್ಳುತ್ತಿವೆ ಅದರ ಬಗ್ಗೆಯೂ ಸರ್ಕಾರ ಗಮನಿಸ ಬೇಕು .




ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ನೀರೂ ಒಂದು ಇಂತಹ ಜೀವ ಜಲವನ್ನು ಸಮರ್ಪಕವಾಗಿ ಬಳಸಿ,ಸಂರಕ್ಷಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ .ಒಂದೆಡೆ ಜನ ನೀರಿಲ್ಲದೇ ಬವಣೆ ಪಡುತ್ತಿದ್ದಾರೆ ಮತ್ತೊಂದೆಡೆ ಪ್ರವಾಹಗಳಿಂದ ನಷ್ಟ ಅನುಭವಿಸುತ್ತಿದ್ದಾರೆ .ಒಮ್ಮೆ ನೀರು ಮಲಿನವಾಗಿ ಜನ ಸತ್ತರೆ ಮತ್ತೊಂದೆಡೆ ಇದೆ ನೀರಿಗಾಗಿ ರಾಜ್ಯ ರಾಜ್ಯಗಳು ಹೊದೆದಾಡುತ್ತಿವೆ. ಎಲ್ಲಸಮಸ್ಯೆಗಳು ಇಂದು ನಿನ್ನೆಯದಲ್ಲ .ಇವಕ್ಕೆ ಸರ್ಕಾರ ಕೇವಲ ತಾತ್ಕಾಲಿಕ ಪರಿಹಾರ ವನ್ನಷ್ಟೇ ನೀಡಿವೆ . ಇದರಿಂದ ಸಮಸ್ಯೆ ಇನ್ನೂ ದ್ವಿಗುಣ ವಾಗಿದೆ .ಇನ್ನಾದರು ಎಚ್ಚೆತ್ತುಕೊಳ್ಳುವುದು ಒಳಿತಲ್ಲವೇ ?